COVID-19 Resources for Mental Health Coaches... Learn More
“ವಿದ್ಯಾರ್ಥಿಗೆ ದೂರದೃಷ್ಟಿ ಅವಶ್ಯ”

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಮ್ರತಾ ಸಿನ್ನೂರ ಅವರಿಗೆ ‘ಯುವ ವಿಜ್ಞಾನಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು”
‘ಸಂಶೋಧನಾ ವಿದ್ಯಾರ್ಥಿಗಳಿಗೆ ದೂರದೃಷ್ಟಿ, ಬದ್ಧತೆ, ಸಾಧನೆ ಮಾಡುವ ತುಡಿತ ಇರಬೇಕು’ ಎಂದು ಮನೋವೈದ್ಯ ಆನಂದ ಪಾಂಡುರಂಗಿ ಹೇಳಿದರು. ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಪ್ರೊ.ಎಸ್.ಪಿ. ಹಿರೇಮಠ ದತ್ತಿ ಅಂಗವಾಗಿ ಈಚೆಗೆ ಆಯೋಜಿಸಿದ್ದ ‘ಯುವ ವಿಜ್ಞಾನಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
‘ಸಂಶೋಧನೆಯಲ್ಲಿ ಉನ್ನತ ಸಾಧನೆ ಮಾಡಬೇಕು. ಆ ನಿಟ್ಟಿನಲ್ಲಿ ಆಳವಾದ ಅಧ್ಯಯನ, ಆಕರಗಳ ಸಂಗ್ರಹ, ವ್ಯವಸ್ಥಿತ ತಯಾರಿ ಅಗತ್ಯ. ಯುವ ವಿಜ್ಞಾನಿ ಪ್ರಶಸ್ತಿ ಪಡೆದವರ ಜವಾಬ್ದಾರಿ ಹೆಚ್ಚಾಗಿದೆ. ಹೆಚ್ಚಿನ ಸಾಧನೆ ಮಾಡಲು ಪುರಸ್ಕಾರಗಳು ಪ್ರೇರಣೆ ನೀಡುತ್ತವೆ’ ಎಂದರು.
‘ಪ್ರೊ.ಎಸ್.ಪಿ. ಹಿರೇಮಠ ಅವರು ಶ್ರೇಷ್ಠ ಶಿಕ್ಷಣ ತಜ್ಞ ಹಾಗೂ ಸಂಶೋಧಕರಾಗಿದ್ದರು. ಅವರ ಆದರ್ಶಗಳನ್ನು ಯುವಜನರು ರೂಢಿಸಿಕೊಳ್ಳಬೇಕು’ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ‘ದೇಶದ ಅಭಿವೃದ್ಧಿ ನಿಟ್ಟಿನಲ್ಲಿ ಸಂಶೋಧಕರ ಪಾತ್ರ ಮಹತ್ವದ್ದಾಗಿದೆ. ಯುವ ವಿಜ್ಞಾನಿಗಳು ಜನರಲ್ಲಿ ವೈಜ್ಞಾನಿಕ ಚಿಂತನೆ ಮೂಡಿಸಬೇಕು’ ಎಂದು ಸಲಹೆ ನಿಡಿದರು.
ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ರಸಾಯನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ನಮ್ರತಾ ಸಿನ್ನೂರ ಮಾತನಾಡಿ, ‘ಯುವ ವಿಜ್ಞಾನಿ ಪ್ರಶಸ್ತಿಯು ಇನ್ನೂ ಹೆಚ್ಚಿನ ಸಂಶೋಧನೆಗೆ ಪ್ರೋತ್ಸಾಹ ನೀಡಿದೆ’ ಎಂದರು. ಶಿವಾನಂದ ಭಾವಿಕಟ್ಟಿ, ಶೈಲಜಾ ಅಮರಶೆಟ್ಟಿ, ಶಂಕರ ಕುಂಬಿ, ಬಸವಪ್ರಭು ಹೊಸಕೇರಿ, ಕೆ.ಎಂ. ಅಂಗಡಿ, ಮಹಾಂತೇಶ ನರೇಗಲ್ ಪಾಲ್ಗೊಂಡಿದ್ದರು.
